ಆರು ತಿಂಗಳಾಗಿತ್ತು ಅವನ ಮುಖ ನೋಡಿ. ಒಂದಿನ ಬೆಳ್ಳಂಬೆಳಿಗ್ಗೆ ಬಡಿದುಕೊಳ್ಳುತ್ತಿದ್ದ ಫೋನ್ ತೆಗೆದರೆ ಅವನ ಮೆಸೇಜ್ ಇತ್ತು.
"ಇನ್ನೈದು ನಿಮಿಷದಲ್ಲಿ ಇಲ್ಲಿರು.
PS: ಹಲ್ಲು ತಿಕ್ಯಂದು ಬಾ, ಇಲ್ಲಾಂದ್ರೆ ಸಿಗರೆಟ್ ಕೊಡಲ್ಲ 😑"
ನನಿಗೆ ಚೆನ್ನಾಗಿ ಗೊತ್ತು. ಮುಕ್ಳಾರೆ ಇಂಪಾರ್ಟೆಂಟ್ ವಿಷ್ಯ ಅಲ್ಲದಿದ್ರೆ ಇವನು ಹಾಗೆಲ್ಲ ಕರಿಯೋನಲ್ಲ ಅಂತ. ಟಕ್ಕಂತ ಹಲ್ಲು ತಿಕ್ಕಿ ಮುಖಾನೂ ತೊಳಿದಲೆ ಉಚ್ಚಂಗೆಪ್ಪರ ಹಟ್ಟಿ ಕಡೆ ಹೊರಟೆ.
ಅರ್ಧ ತೆಗೆದ ಬಾಗಿಲಲ್ಲಿ ಅವನ ಕಾಲು ಕಂಡವು. ಕಾಲುಮೇಲೆ ಕಾಲು ಹಾಕಿ, ತಲೇನ ಮಡಿಸಿಟ್ಟ ಹಾಸಿಗೆಗೆ ಒರಗಿಸಿ, ಮುಖದ ಮೇಲೆ ಹಳೇ ಜಿಡ್ಡುಗಟ್ಟಿದ ಟವೆಲ್ ಮುಚ್ಚಿಕೊಂಡು ಮಲಗಿದ್ದಾನೆ. ಅವನ ಧ್ಯಾನಮಗ್ನ ಸ್ಥಿತಿ ಅದು. "ಹ್ಮ್ ಯಾವ್ದೋ ಕೇಸ್ ಸಿಕ್ಕಂಗೈತೆ" ಅಂದುಕೊಂಡು ಒಳಗೆ ನಡೆದೆ. ಸಗಣಿ ನಾತ ಗಮ್ಮ್ ಅಂತ ಬಡಿಯಿತು ಮೂಗಿಗೆ.
ಎಲ್ಲಾ ಬಿಟ್ಟು ಇಲ್ಲೇ ಯಾಕೆ ಇವನು ಮನೆ ಮಾಡ್ಕೊಂಡಿದಾನೆ ನನಿಗಿನ್ನೂ ಅರ್ಥ ಆಗಿಲ್ಲ. ಹೇಳಬೇಕಂದ್ರೆ ಅದು ಮನೇನೆ ಅಲ್ಲ. ಎರಡು ಮನೆ ನಡುವೆ ಇರೋ ಮೂರಡಿ ಸಂದಿ ಮೇಲೆ ಹಂಚು ಹೊದಿಸಿ ಒಂದು ತುದಿಗೆ ಇಟ್ಟಿಗೆ, ಇನ್ನೊಂದು ತುದಿಗೆ ಬಾಗಿಲು ಕೂರಿಸಿದ್ದಾರೆ ಅಷ್ಟೆ. ಎಡಗಡೆ ಗೋಡೆಯಿಂದ ಸಮಸ್ಯೆಯಿಲ್ಲ ಆದರೆ ಬಲಗಡೆ ಇರೋದು ದನದ ಕೊಟ್ಟಿಗೆ. ಕಲ್ಲಿನ ಗೋಡೆಯ ತೂತುಗಳಿಂದ ದನಗಳು ಸಗಣಿ ಹಾಕಿದಾಗಲೆಲ್ಲ ಸಗಣಿಯ ಮಣಿಗಳು ಸಿಡಿದು ಮುಖದ ಮೇಲೆ ಬಂದು ಕೂರುತ್ತವೆ.
ನಾನು ಕೂರಲು ಕಡಿಮೆ ಗಬ್ಬೆದ್ದಿರುವ ಜಾಗ ಹುಡುಕುತ್ತಿದ್ದಾಗ ಅವನೇ ಹಳೇ ನ್ಯೂಸ್ ಪೇಪರ್ ಶೀಟ್ ಕೊಟ್ಟ. ಹಾಸಿಕೊಂಡು ಕುಂತೆ.
"ನಿಮ್ಮೌನ್ ಶೆರ್ಲಾಕ್ ಸೂಳೆಮಗನೆ..!" ನಾನು ಇಷ್ಟು ದಿನ ಎಲ್ಲಿದ್ದೆ ಏನು ತಾನು ಎಂದು ವಿಚಾರಿಸಲು ಸೊಲ್ಲು ತೆಗೆಯುತ್ತಿದ್ದಂಗೆ ನನ್ನ ಬಾಯಿ ಮುಚ್ಚಿಸಿದ.
"ತಡಿ ತಡಿ. ಟೈಮೆಷ್ಟು ನೋಡು ಈಗ?" ಕೇಳಿದ.
"ಐದು ಐವತ್ತೈದು"
ಮರುತ್ತರ ನೀಡದೆ ಅವನ ಫೋನ್ ತೆಗೆದು ತೋರಿಸಿದ. ಅದೊಂದು ವಾಟ್ಸಪ್ ಮೆಸೇಜು. ಐದು ನಲವತ್ತರಲ್ಲಿ ಬಂದಿರೋದು.
"ಶೆರ್ಲಾಕಪ್ಪ, ಎಲ್ಲಿ ಹಡಬೆ ತಿರಗಕೆ ಹೋಗಿದ್ದೆ. ಹುಡುಕಿ ಹುಡುಕಿ ಸಾಕಾತು. ಬೆಳಿಗ್ಗೆ ಆರ್ ಗಂಟೆಗೆ ಸರಿಯಾಗಿ ನಿಮ್ಮನೆ ಮುಂದೆ ಇರ್ತೀನಿ. ನಿನ್ನ ಕಾಣದಲೇ ಹೋಗಳಲ್ಲ ನಾನು. - ಕುಂಟಸಿದ್ದಪ್ಪರ ಹನುಮಕ್ಕ"
ಅಲೇ ಇವ್ನೌನ್. ಇವಳು ನೋಡಿದ್ರೆ ಕುಂಟಸಿದ್ದಪ್ಪರ ಹನುಮಕ್ಕ. ಶೆರ್ಲಾಕ್ ಹೋಮ್ಸ್ ಹತ್ತಿರ ಇವಳಿಗೇನು ಕೆಲಸ ಅಂತ ನಾನು ತಲೆ ಕೆರೆದುಕೊಳ್ಳುತ್ತಿದ್ದಂಗೆ ಬಾಗಿಲ ಹತ್ತಿರ ಯಾರೋ ಬಂದಂಗಾಯಿತು. ಅವಳೇ. ಯಾರ ಅಪ್ಪಣೆಗೂ ಕಾಯದೇ ಕದ ದೂಡಿಕೊಂಡು ಒಳಬಂದಳು. ನೆಲದ ಮೇಲಿರೋ ಕೊಳೆ ಲೆಕ್ಕಿಸದೆ ಅಲ್ಲೇ ಕದದ ಮೂಲೆಯಲ್ಲಿ ಕುಂತು ಸೆರಗಿನಿಂದ ಹಣೆಯ ಮೇಲಿನ ಬೆವರು ಒರೆಸಿಕೊಳ್ಳತೊಡಗಿದಳು. ಎರಡು ನಿಮಿಷವಾದರೂ ಅವಳು ಬಾಯಿ ಬಿಡದದ್ದು ನೋಡಿ ಶೆರ್ಲಾಕ್ ಮಾತಿಗೆಳೆದ.
"ನಿಮ್ಮನೆ ಇರದು ಉಪ್ಪಾರ ಹಟ್ಟೇಗೆ ತಾನೆ. ನಮ್ಮನೆಗೆ ಸೀದಾ ಬರೋದು ಬಿಟ್ಟು ಮಸೀದಿ ಸುತ್ತು ಹಕ್ಯಂದು ಪುರಜ್ಜರ ಮನೆ ಮುಂದಾಸಿ ಯಾಕೆ ಬಂದೆ"
ಹನುಮಕ್ಕನ ಮುಖ ಸುಕ್ಕುಗಟ್ಟಿತು. "ನಿನಿಗೆ ಹೆಂಗೆ ಗೊತ್ತಾತು?" ಅಂದಳು.
"ಮೈಮೇಲಿರೋ ಜೋಳದ ಸುಂಕು ನೋಡಿದರೆ ಗೊತ್ತಾಗಲ್ವ. ದಾಸಪ್ಪರ ಮನೆಯವ್ರು ತೆನೆ ಒಡೆಸ್ತಿದಾರಲ್ಲ. ಅಲ್ಲಾಸಿ ಹಾದು ಬಂದೀಯ ಅಂತ ಹೇಳಕೆ ಶೆರ್ಲಾಕ್ ಹೋಮ್ಸೇ ಬೇಕ. ಇನ್ನ ನಿಮ್ಮನೆಯಿಂದ ಇಲ್ಲಿಗೆ ಎರಡ್ ನಿಮಿಷ ಸಾಕು ಅಂತದ್ರಲ್ಲಿ ಹಣೆ ಮೇಲೆ ಬೆವರು ಬರ್ತಿದೆ ಅಂದ್ರೆ ಸುತ್ತ್ ಹರಿದುಕೊಂಡೇ ಬಂದಿದೀಯ"
ಹನುಮಕ್ಕ "ಶೆರ್ಲಾಕ್ ಹೋಮ್ಸ್ ಮನೆಗೆ ಹೋಗಿದಾಳೆ ಅಂತ ಗೊತ್ತಾದ್ರೆ ಕಳ್ರು ಹುಷಾರಗಬಹುದು ಅಂತ ಹಿಂಗಾಸಿ ಬಂದೆ" ಅಂದಳು
ಶೆರ್ಲಾಕ್ ಸೀದಾ "ಏನ್ ವಿಷ್ಯ" ಅಂದ.
ಹನುಮಕ್ಕ ಮಾತಾಡಬೇಕೋ ಆಡಬಾರದೋ ಎನ್ನುವಂತೆ ನನ್ನ ಮುಖ ನೋಡಿದಳು.
ಶೆರ್ಲಾಕ್ "ಏನೂ ಸಂಕೋಚ ಬ್ಯಾಡ, ಅವನೂ ನಾನೂ ಜತೆಗೇ ಕೆಲ್ಸ ಮಾಡೋದು. ಧೈರ್ಯವಾಗಿ ಹೇಳು" ಅಂದ
ಹನುಮಕ್ಕ ಬಾಯಿ ತೆರೆದಳು. "ನಿನಿಗೇ ಗೊತ್ತಲ್ಲ ಶೆರ್ಲಾಕೂ ಒಬ್ಬ ಮಗನ್ನಿಟ್ಕಂದು ಸೊಪ್ಪು ಮಾರ್ಕೆಂದು ಜೀವನ ಮಾಡ್ತದೀನಿ. ಈಗ ಒಂದು ತಿಂಗಳಿಂದ ಚೆಲ್ಲಿದ ಬೀಜ ಎಲ್ಲ ಸಸಿ ಆಗತ್ಲೂ ಸುಟ್ಟು ಹೋಗ್ತೈತೆ. ಯಾವನೋ ನನ್ನ ಸೌತಿಮಗ ಔಷದಿ ಹೊಡಿತಿರಬೌದು ಅಂತ ನಾನೂ ನಮ್ಮ ಹುಡುಗನೂ ಅಲ್ಲೇ ನಮ್ಮ ಉಮ್ಮಣ್ಣರ ಹೊಲದ ಬದಿನತ್ರ ಐತಲ್ಲ ಬೇವಿನ ಮರ, ಆ ಮರದ ಮೇಲೆ ಹತ್ತಿ ಒಂದು ವಾರ ರಾತ್ರೆ ಕಾದಿದೀವಿ. ರಾತ್ರೆ ಯಾವ ನಾಯಿನೂ ಕಾಲಿಡಲ್ಲ. ಬೆಳಿಗ್ಗೆ ನೋಡಿದ್ರೆ ಗಿಡ ಒಣಗಿರ್ತವೆ. ನನಿಗಂತೂ ಸಾಕಾಗಿ ಹೋತು ಶೆರ್ಲಾಕೂ. ಸೊಪ್ಪಿನ ಬೀಜಕ್ಕೆ ಎಷ್ಟು ಅಂತ ದುಡ್ಡು ಹಾಕನ. ಅದ್ಯಾವ ಇಸಪಾತಕ ಅಂತ ಕಂಡುಹಿಡಿದುಕೊಡು ಶೆರ್ಲಾಕೂ. ಈಗ ನೋಡು ಮಾರ್ಕೆಟ್ಟಿಂದ ಸೊಪ್ಪು ತಂದು ಮಾರ್ತದೀನಿ." ಪಕ್ಕದಲ್ಲಿರುವ ಸೊಪ್ಪಿನ ಪುಟ್ಟಿ ತೋರಿಸಿದಳು.
"ಸೊಪ್ಪಿನ ಮಡಿ ಮೇಲೆ ಹೆಜ್ಜೆ ಗುರುತೇನರ ಬಿದ್ದಿರ್ತವ?" ಕೇಳಿದ ಶೆರ್ಲಾಕ್.
"ಇಲ್ಲ"
"ಎಲೆಯೆಲ್ಲ ಸುಟ್ಟಂಗೆ ಆಗಿರ್ತವ?"
"ಇಲ್ಲ"
"ಬೀಜದಲ್ಲೇನಾದ್ರೂ ಸಮಸ್ಯೆ ಐತೋ ಇಲ್ಲೋ ನೋಡಿದ್ಯ? ಅಂದ್ರೆ ಬ್ಯಾರೆ ಕಂಪನಿ ಬೀಜ ಹಾಕಿ ನೋಡಿದ್ಯ?"
"ಹೂನೋ ನಮ್ಮಪ್ಪನೇ. ನಾಕು ನಮೂನಿ ಬೀಜ ಹಾಕಿದೀನಿ ಇಲ್ಲಿಗೆ. ನಮ್ಮನೆ ಹಿತ್ಲಾಗೆ ಪಸಂದಾಗೆ ಹುಟ್ತವೆ. ಹೊಲ್ದಾಗೆ ಹುಟ್ಟವಲ್ಲವು"
"ತಡಿ ತಡಿ. ನಿಮ್ಮದು ಬೆದ್ಲು ತಾನೆ? ಬೋರ್ವೆಲ್ ಯಾವಾಗ ಹಾಕಿಸಿದೆ ಸೊಪ್ಪು ಬೆಳಿಯಕೆ"
"ಎಲ್ಲೇ ಬೋರ್ ತರಕೋಗನ ಮರಾಯ. ಚಾನಲ್ಲಿಂದ ನೀರು ತಂದಿದಾರಲ್ಲ ಅಡಿಕೆ ತ್ವಾಟದವ್ರು. ನಮ್ಮ ಹೊಲದ ಮೂಲೆಯಾಗೆ ವಾಲ್ವ್ ಹತ್ರ ನೀರು ಸೋರ್ತತೆ. ಅದೇ ನೀರಾಗೆ ಒಂದು ನಾಲ್ಕು ಮಡಿ ಮಾಡಿದೀನಿ ಅಷ್ಟೇ."
"ಸರಿ ಕೊನೇ ಸರ್ತಿ ಬೀಜ ಚೆಲ್ಲಿ ಎಷ್ಟು ದಿನ ಆತು"
"ಮನ್ನೆ ಚೆಲ್ಲಿದ್ದು. ಅಲೆ ಮಳಕೆ ಮೇಲೆ ಬರ್ತೈತೆ"
ಅಷ್ಟರಲ್ಲಿ ಶೆರ್ಲಾಕ್ ಮನೆ ಓನರ್ ಸಾಂತಕ್ಕ ಟೀ ತಂದುಕೊಟ್ಟಳು. ಲೋಟ ಬಾಯಿಗಿಡುತ್ತಿದ್ದಂಗೆ ಪಕ್ಕದಿಂದ ದನಗಳು ಉಚ್ಚೆ ಹೊಯ್ಯವುದು ಕೇಳಿಸಿತು. ಗೋಮೂತ್ರದ ಹನಿಗಳು ಟೀಯೊಳಗೆ ಸಿಡಿದು ಬೀಳುವುದು ನನಿಗೆ ಕಂಡಿತು. ಶೆರ್ಲಾಕ್ಗೆ ಇದರ ಪರಿವೆ ಇದ್ದಂತೆ ಕಾಣಲಿಲ್ಲ. ಸುಮ್ಮನೆ ತನ್ನ ಯೋಚನೆಯಲ್ಲಿ ಮುಳುಗಿ ಟೀ ಹೀರುತ್ತಿದ್ದ. ನಾನು ಕೆಮ್ಮಿದಂತೆ ಮಾಡಿ ಲೋಟ ಪಕ್ಕಕ್ಕೆ ತಳ್ಳಿ ಯಾರಾದರೂ ಮಾತಾಡ್ತಾರಾ ಅಂತ ಕಾದೆ. ಕೊನೆಗೆ ಶೆರ್ಲಾಕ್ ಏನನ್ನೋ ನಿರ್ಧರಿಸಿಕೊಂಡವನಂತೆ
"ಸರಿ ನೀನು ಹೋಗು. ಸಾಯಂಕಾಲ ಬಂದು ಕಾಣು" ಅಂದ.
ಹನುಮಕ್ಕ ಹೋಗುತ್ತಲೂ ಶೆರ್ಲಾಕ್ ಪ್ಲೇಯರ್ಸ್ ಹಚ್ಚಿದ. ಎರಡು ಧಮ್ ಎಳೆಯುವಷ್ಟರಲ್ಲಿ ಮನೆಪೂರಾ ಹೊಗೆತುಂಬಿಕೊಂಡಿತು. ಒಂದು ಧಮ್ ಇಸಕೊಳ್ಳಲು ಕೈಚಾಚಿದ ನಾನು ಆ ಹೊಗೆಯಲ್ಲಿ ಸರಿಯಾಗಿ ಕಾಣದೆ ಸಿಗರೆಟ್ ಮೂತಿಗೆ ಕೈಯಿಟ್ಟು ಕೈ ಸುಟ್ಟುಕೊಂಡೆ. ಆ ಹೊಗೆಯ ಮೋಡದೊಳಗಿಂದ ಶೆರ್ಲಾಕ್ ಮಾತಾಡುವುದು ನಾಟಕದಲ್ಲಿನ ಸೀನ್ನಂತೆ ಕಾಣುತ್ತಿತ್ತು (ಕೇಳುತ್ತಿತ್ತು).
"ನಿನಿಗೇನ್ ಅನ್ಸುತ್ತೆ ರಾಘು?" ಕೇಳಿದ ಶೆರ್ಲಾಕ್.
"ಪಕ್ಕದಲ್ಲೇ ಅಡಿಕೆ ತೋಟ ಐತೆ ಅಂತಾಳೆ. ಅಡಿಕೆ ಮರಗಳೆಲ್ಲ ಸೊಪ್ಪಿಗೆ ಬಿಟ್ಟಿರೋ ನೀರನ್ನೂ ಹೀರಿಕೊಳ್ತಿರಬಹುದು. ಸಸಿಗಳು ನೀರಿಲ್ದೇ ಸಾಯ್ತಿರಬಹುದು."
"ಹಂಗಾಗಲ್ಲ,, ಸೊಪ್ಪಿನ ಬೇರು ನೆಲದೊಳಗೆ ಹೋಗೋದೆ ಮೂರ್ನಾಕು ಇಂಚು, ಇನ್ನ ಇವುಗಳ ನೀರು ಅಡಿಕೆ ಮರಗಳು ಕದಿತಾವ"
"ಮತ್ತೆ ಯಾವ್ದಾದ್ರೂ ರೋಗ ಇರಬಹುದು ಇಲ್ಲಾಂದ್ರೆ ದೆವ್ವಾನೋ ಭೂತಾನೋ ಬಂದು ಕಳೆನಾಶಕ ಹೊಡಿತಿರಬಹುದು ಅದಿಕ್ಕೇ ಹೆಜ್ಜೆಗುರುತು ಮೂಡ್ತಿಲ್ಲ"
"ರಾಘು ಮೈ ಡಿಯರ್ ಫೆಲ್ಲೋ, ಕಣ್ಣಿಗೆ ಕಾಣಿಸಿದ್ದು ನಿನಿಗೆ ತಲೆಗೆ ಹೋಗಲ್ಲ. ಹನುಮಕ್ಕ ಹೇಳ್ದಂಗೆ ಬರೇ ಗಿಡ ಸಾಯ್ತವೆ ಆದ್ರೆ ಎಲೆ ಸುಟ್ಟಿರಲ್ಲ. ಅಂದ್ರೆ ಏನರ್ಥ? ಯಾರೋ ಕಳೆನಾಶಕಾನ ಗಿಡಗಳ ಮೇಲೆ ಸಿಂಪಡಿಸ್ತಿಲ್ಲ, ಸೀದಾ ಬೇರಿಗೇ ಹೋಗೋ ತರ ಮಾಡ್ತಿದಾರೆ. ಬೋರ್ವೆಲ್ ಇಲ್ಲ, ಚಾನಲ್ ಇಂದ ಬರೋ ವಾಲ್ವ್ ಅಲ್ಲಿ ಸೋರುತ್ತಿರೋ ನೀರಲ್ಲೇ ಸೊಪ್ಪು ಹಾಕಿದೀನಿ ಅಂದ್ಲಲ್ಲ ಅದ್ರಿಂದ ನಿನಿಗೇನರ ಹೊಳಿತಿದ್ಯ? ವೆರಿ ಈಸಿ, ಯಾರೋ ಆ ವಾಲ್ನಲ್ಲೇ ಕಳೆನಾಶಕನ ಹಾಕ್ತಿದಾರೆ. ಅದಿಕ್ಕೇ ಮಡಿ ಮೇಲೆ ಹೆಜ್ಜೆ ಗುರುತಿಲ್ಲ. ಅದೂ ರಾತ್ರಿನೇ ಹಾಕ್ಬೇಕಿಲ್ಲ ತಗ. ಹಗಲೊತ್ತು ಹಾಕಿ ಹೋದ್ರೆ ಬೆಳಿಗ್ಗೆ ಅಷ್ಟರಲ್ಲಿ ಗಿಡಗಳು ಸತ್ತು ಹೋಗಿರ್ತವೆ. ನಡಿ ಗಾಡಿ ಎತ್ತು ಅವರ ಹೊಲದ ಕಡೆ ಹೋಗಿ ಬರನ"
ನಾನು ಅವನ ವಿವರಣೆಗೆ ತಲೆದೂಗುತ್ತಾ ಅವನ ಮಾಸ್ಕ್ ಇಲ್ಲದ ಸ್ಪ್ಲೆಂಡರ್ ಪ್ಲಸ್ ಎತ್ತಿ ಹನುಮಕ್ಕನ ಹೊಲದ ಕಡೆ ಓಡಿಸಿದೆ. ಶೆರ್ಲಾಕ್ ಇಳಿದವನೇ ಸೀದಾ ವಾಲ್ವ್ ಕಡೆ ಹೋದ. ನಾನೂ ಅವನ ಹೆಜ್ಜೆಯನ್ನೇ ಅನುಸರಿಸಿದೆ. ಶೆರ್ಲಾಕ್ ತನ್ನ ಹಳೇ ನಟರಾಜ ಜಾಮೆಟ್ರಿ ಜತೆ ಬಂದಿದ್ದ ಭೂತಗನ್ನಡಿ ಹಿಡಿದು ಪರೀಕ್ಷಿಸಿದ. ಪಕ್ಕದಲ್ಲಿ ಯಾರೋ ಉಗಿದಿದ್ದ ಗುಟ್ಕಾದ ಪುಡಿಯನ್ನ ಕೈಗೆತ್ತಿಕೊಂಡು ಮೂಸಿ ನೋಡಿದ. ಎದ್ದು ಸುತ್ತಮುತ್ತಲನ್ನು ಕಣ್ಣಲ್ಲೇ ನುಂಗುವಂತೆ ನೋಡಿದ. ಪಕ್ಕದಲ್ಲಿರುವ ಅಡಿಕೆ ತೋಟವನ್ನು ದಿಟ್ಟಿಸಿದ. ಸ್ಪ್ರಿಂಕ್ಲರ್ ಪುಚ್ಕು ಪುಚ್ಕು ಅಂತ ನೀರನ್ನು ಸುತ್ತಲೂ ಹಾರಿಸುತ್ತಿತ್ತು.
ಶೆರ್ಲಾಕ್ಗೆ ತೃಪ್ತಿಯಾದಂತೆ ಕಂಡಿತು. ವಾಪಸ್ ಮನೆ ಕಡೆ ತಿರುಗಿಸಿದೆ ಬೈಕನ್ನ.
ಸಂಜೆ ಹನುಮಕ್ಕ ಬಂದಳು. "ಏನಾದ್ರೂ ಗೊತ್ತಾತ?"
ಶೆರ್ಲಾಕ್ ಒಂದು ಕಳೆನಾಶಕದ ಪ್ಯಾಕೆಟ್ ಎಸೆದು "ಇದೇ ನಿನ್ನ ಸೊಪ್ಪಿನ ಗಿಡಕ್ಕೆ ಹಿಡಿದಿದ್ದ ಭೂತ" ಅಂದ.
ಹನುಮಕ್ಕನಿಗೆ ಏನೂ ಅರ್ಥವಾದಂತೆ ಕಾಣಲಿಲ್ಲ. ಮತ್ತೆ ಶೆರ್ಲಾಕೇ ಮಾತಾಡಿದ.
"ಈ ಚಾನಲ್ಲಿಂದ ನೀರ್ ತಂದಿದಾರಲ್ಲ ಅವ್ರಲ್ಲಿ ಯಾರಾದ್ರೂ ನಿನಿಗೆ ವಾಲ್ವ್ ನೀರನ್ನ ಬಳಸಬೇಡ ಅಂತ ರೊಳ್ಳೆ ತೆಗೆದಿದ್ರ?"
"ಅವ್ರೇ ಕಳ್ಳತನದಿಲಿ ಕುಡಿಯ ನೀರನ್ನ ತ್ವಾಟಕ್ಕೆ ಹೊಡಿತದಾರೆ, ನಾನೊಂದು ಹನಿ ತಗಂದ್ರೆ ಅಂತಾರ? ಇಲ್ಲ, ಯಾರೂ ಒಂದು ಮಾತು ಅಂದಿಲ್ಲ"
"ಬಾಯ್ಬಿಟ್ಟು ಅಂದಿಲ್ಲ ಹನುಮಕ್ಕ ಆದ್ರೆ ಲಕ್ಷಾಂತರ ರುಪಾಯಿ ಹಾಕಿ ನೀರು ತಂದಿರೋದು ಅವ್ರು. ನೀನು ಪುಕ್ಸಟೆ ನೀರಾಗೆ ಸೊಪ್ಪು ಬೆಳ್ಕಂದ್ರೆ ಮುಕ್ಳ್ಯಾಗೆ ಉರಿ ಹತ್ತಲ್ಲ ಅವ್ರಿಗೆ? ಅದೇ ಉರಿಗೆ ನಿನ್ನ ಸೊಪ್ಪಿನ ಗಿಡಕ್ಕೆ ಕಳೆನಾಶಕ ಹಾಕ್ತಿರದು"
"ಯಾವ್ ನನ್ನ ಗಂಡನ ಸೂಳೆಮಗ ಹೇಳು ಅವನು. ಕೆಡವಾಕ್ಕೊಂಡು ಬಾಯಾಗೆ ಉಚ್ಚೆ ಹೊಯ್ತೀನಿ"
"ಹನುಮಕ್ಕ, ಯಾರಾದ್ರೇನು ಬಿಡು. ಬೆಳಕು ಹರಿದರೆ ಮನೆ ಬಾಗಿಲಾಗೆ ನೋಡ ಮಕಾನೆ. ಸುಮ್ನೆ ಯಾಕೆ ಅವೆಲ್ಲ. ನಿನಿಗೇನು ಸೊಪ್ಪಿನ ಸಸಿಗಳು ಸಾಯೋದು ನಿಂತ್ರೆ ಸಾಕಲ್ಲ"
"ಹೂನೋ ಮರಾಯ್ಗಿತ್ತಿ ಮಗನೆ ಅಷ್ಟು ಮಾಡಿ ಪುಣ್ಯ ಕಟ್ಗ್ಯ"
ಶೆರ್ಲಾಕ್ ಒಂದು ದೊಡ್ಡ ಮರ ಕೊಲ್ಲುವ ವಿಷದ ಬಾಟಲಿಯನ್ನು ಆಕೆಯ ಕೈಗಿಟ್ಟು "ಆ ನೀರಿನ ವಾಲ್ವ್ ಹತ್ತಿರ ಇದನ್ನ ಇಟ್ಟು, ಗೂಟ ಹೊಡೆದು ಒಂದು ಬೋರ್ಡ್ ನೇತಾಕು. ಅದರಲ್ಲಿ 'ನಂದು ಹೋದ್ರೆ ಬರೇ ಸೊಪ್ಪು. ನಿಂದು ಅಡಿಕೆ ತ್ವಾಟ' ಅಂತ ಬರಿ" ಅಂದ. ಹನುಮಕ್ಕ ಉರುಳಾಡಿ ನಗತೊಡಗಿದಳು. ನನಿಗೂ ನಗು ಬಂತು.
ಶೆರ್ಲಾಕ್ "ಯಾಕ್ ನಗ್ತೀಯ, ನಾನ್ ಹೇಳ್ದಂಗೆ ಮಾಡು. ಸೊಪ್ಪು ಬಂದಾಗ ಒಂದ್ನಾಕು ಸಿವುಡು ತಂದ್ಕೊಡು ಸಾಕು" ಅಂದ. ಹನುಮಕ್ಕ ತಲೆಯಾಡಿಸಿ ಹೋದಳು.
ನಾನು ಆಕಿ ಹೋದ ಕೂಡಲೇ "ಅದ್ಯಾರು ಅಂತ ನಿನಿಗೊತ್ತು ಅಂತ ನನಿಗೊತ್ತು. ಹೇಳು ಶೆರ್ಲಾಕ್" ಕೇಳಿದೆ.
"ಇನ್ಯಾರು ಅವರ ಹೊಲದಿಂದ ಮೇಲೈತಲ್ಲ, ಶೇಖರಪ್ಪರ ತ್ವಾಟ? ಅವನೇ. ಶೇಖರಪ್ಪನ ಮಗ ಆನಂದ. ಅಲ್ಲೆಲ್ಲ ಗುಟ್ಕಾ ಉಗುಳಿದ್ದು ನೋಡಿದ್ಯಲ್ಲ. ಅದೆಲ್ಲ ಅವನದ್ದೇ. RMD ಅದು. ಸೂಪರೂ-ವಿಮಲ್ ಹಾಕಿದ್ರೇ ಹೆಚ್ಚು ಇಲ್ಲಿ. ಅಂತದ್ರಾಗೆ RMD ಹಾಕನೂ ಅವನೊಬ್ಬನೇ ಉಪ್ಪಾರ ಹಟ್ಟೇಗೆ. ನಮ್ಮ ನೀರಾಗೆ ಇವಳು ಸೊಪ್ಪು ಬೆಳ್ಕಂತದಾಳಲ್ಲ ಅಂತ ಹೊಟ್ಟೆ ಉರಿಗೆ ಹಿಂಗೆ ಮಾಡಿದಾನೆ ಮನೆಮುರುಕ ಸೂಳೆಮಗ. ಸುಮ್ನೆ ಹೇಳಿದ್ರೆ ಕಿತ್ತಾಡಿ ಮಕ ಕೆಡಿಸಿಕೊಳ್ತಾರೆ ಅಂತ ಆಕಿಗೆ ಹೇಳ್ಲಿಲ್ಲ. ಎದ್ರೂಬಿದ್ರೂ ಜತೆಗೇ ಬಾಳ್ವೇ ಮಾಡ್ಬೇಕಾದೋರು" ಅನ್ನುತ್ತಾ ಮತ್ತೊಂದು ಪ್ಲೇಯರ್ಸ್ ಹಚ್ಚಿದ.
ಶೆರ್ಲಾಕ್ ಬೋರ್ಡ್ ಆನಂದನ ಮೇಲೆ ಕೆಲಸ ಮಾಡಿತು ಅನ್ನಿಸುತ್ತೆ. ಒಂದು ವಾರ ಬಿಟ್ಟು ಬಂದ ಹನುಮಕ್ಕ ಎರಡು ಸಿವುಡು ಕೊತ್ತಂಬ್ರಿ, ಎರಡು ಸಿವುಡು ಸಬ್ಬಸ್ಕೆ, ಎರಡು ಸಿವುಡು ಹುಳಿಸೊಪ್ಪು ಕೊಟ್ಟು ಹೋದಳು.
ಇಟ್ಸ್ ಮುಕ್ಳಾರ ಎಲಿಮೆಂಟರಿ, ಕಣ್ಲ ರಾಘು!!
ReplyDeleteಸಿಕ್ಕಾಬಟ್ಚೆ ಇದು!! ಲವ್ಡಿಟ್.
Chindi 😂
ReplyDeleteನಂದು ಹೋದ್ರೆ ಬರೇ ಸೊಪ್ಪು. ನಿಂದು ಅಡಿಕೆ ತ್ವಾಟ' ಅಂತ ಬರಿ" 😁😁😁ಮುಕ್ಲ್ಯರ ಪಸಂದ ಐತೋ ಅಣ್ಣ🔥
ReplyDelete