Sunday, 7 November 2021

ಸಿನಿಮಾದಲ್ಲಿ "ಕಾಂಟೆಕ್ಸ್ಟ್" ಮತ್ತು ಡನ್ಕರ್ಕ್

ಒಂದು ಸೀನ್ ನಡೀತಾ ಇದೆ ಅನ್ಕಳ್ರಿ. ಒಬ್ಬ ಹುಡುಗ ಹೊಟ್ಟೆ ಹಸಿದು ಒಂದು ಅಂಗಡೀಲಿ ಬ್ರೆಡ್ ಕದಿತಾನೆ. ಪೋಲಿಸ್ರು ಹಿಡ್ಕಂಡು ಒದಿಯಕ್ ಶುರು ಮಾಡ್ತಾರೆ. ಇದಿಷ್ಟನ್ನ ಸ್ಕ್ರೀನ್ ಮೇಲೆ ನೋಡಿ ಅಯ್ಯೋ ಪಾಪ ಹುಡುಗ ಅಂತ ನಮಿಗೆ ಅನ್ಸಕೆ ಅವ್ನು ಯಾರು, ಯಾವ ದೇಶದವ್ನು, ಯಾರ ಮಗ ಇತ್ಯಾದಿ ಯಾವ ಹಿಂದೆಮುಂದೆಗಳೂ ಬೇಕಾಗಲ್ಲ. ಆದ್ರೆ ಕೆಲವೊಂದು ಸಿನಿಮಾಗಳು ಅಥವಾ ದೃಶ್ಯಗಳು ಇರ್ತವೆ. ಅದರ ಕಾಂಟೆಕ್ಸ್ಟ್ ಗೊತ್ತಿಲ್ಲ ಅಂದ್ರೆ ಏನ್ ನಡಿತೀದೆ ಹೆಂಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತೇ ಆಗಲ್ಲ. ಥಿಯೇಟರಲ್ಲಿ ಡನ್ಕರ್ಕ್ ನೋಡಕ್ ಹೋದಾಗ ಹಿಂಗೇ ಆಗಿತ್ತು. ಕೆಳಗಡೆ ಬೀಚ್ ಗುಂಟ ಸೈನಿಕರು ಸಾಲುಗಟ್ಟಿ ನಿಂತಿದಾರೆ. ಮೇಲ್ಗಡೆಯಿಂದ ವಿಮಾನಗಳು ಅವರ ಮೇಲೆ ಬಾಂಬ್ ಸುರಿತಿದಾರೆ. ಆದ್ರೆ ಥಿಯೇಟರಲ್ಲಿದ್ದ ಮುಕ್ಕಾಲು ಜನಕ್ಕೆ ಬ್ರಿಟಿಷವ್ರು ಎಸ್ಕೇಪ್ ಆಗಕೆ ಟ್ರೈ ಮಾಡ್ತಿದಾರೆ ಯಾವ್ದೋ ದೇಶದವ್ರು (ಸಿನಿಮಾದಲ್ಲಿ ಎಲ್ಲೂ "ಜರ್ಮನ್" ಪದ ಬಳಸಿಲ್ಲ. ಬರೀ "ಶತ್ರು" ಅಂತ ಮಾತ್ರ ಹೇಳ್ತಾರೆ)  ಅವ್ರನ್ನ ಸಾಯ್ಸಕ್ ಟ್ರೈ ಮಾಡ್ತಿದಾರೆ ಅಂತ ಬಿಟ್ರೆ ಏನ್ ನಡೀತಿದೆ ಅಂತಾನೆ ಗೊತ್ತಿರಲಿಲ್ಲ. ಶಾಪಿಂಗ್‌ಗೆ ಅಂತ ಮಾಲಿಗೆ ಬಂದವ್ರು ಹಂಗೇ ಟಿಕೆಟ್ ತಗೊಂಡ್ ಬಂದು ಕುಂತಿರಬೇಕು.

ನೀವು ಡನ್ಕರ್ಕ್ ನೋಡಿದ್ರೆ ನಿಮಿಗೆ ಅದರ ಕಾಂಟೆಕ್ಸ್ಟ್ Obvious ಅನ್ಸಿರತ್ತೆ. ಆದ್ರೆ ಡನ್ಕರ್ಕ್ ಅರ್ಥ ಆಗಕೆ ಎಷ್ಟೊಂದ್ ವಿಷಯ ಗೊತ್ತಿರಬೇಕು ಸುಮ್ನೆ ಯೋಚ್ನೆ ಮಾಡ್ರಿ. ಮೊದಲಿಗೆ ಕೆಳಗಡೆ ನಿಂತಿರೋ ಬ್ರಿಟಿಷವರ ಮೇಲೆ ವಿಮಾನದಲ್ಲಿ ಬಾಂಬ್ ಉದುರುಸ್ತಿರೋವ್ರು ಜರ್ಮನಿಯವ್ರು ಅಂತ ಗೊತ್ತಿರಬೇಕು. ಅದಕ್ಕೂ ಮೊದ್ಲು ಜರ್ಮನಿ ಮತ್ತೆ ಬ್ರಿಟನ್ ನಡುವೆ ಯುದ್ಧ ನಡೀತಿತ್ತು ಅಂತ ಗೊತ್ತಿರಬೇಕು. ಆ ಯುದ್ಧದಲ್ಲಿ ಫ್ರಾನ್ಸ್ ಮತ್ತೆ ಇಂಗ್ಲೆಂಡ್ ಒಂದಾಗಿ ಜರ್ಮನಿ ಮೇಲೆ ಹೋರಾಡ್ತಿದ್ವು ಅಂತ ಗೊತ್ತಿರಬೇಕು. ಜರ್ಮನಿ ಶತ್ರು ಸೈನ್ಯನ ಧ್ವಂಸ ಮಾಡ್ತಾ ಫ್ರಾನ್ಸ್‌ನ ಆಕ್ರಮಿಸಿಕೊಳ್ತಾ ಬಂದು ಬ್ರಿಟಿಷ್ ಮತ್ತೆ ಫ್ರೆಂಚರನ್ನ ಸಮುದ್ರದ ದಡದ ತನಕ ಅಟ್ಟಿಕೊಂಡು ಬಂದಿದ್ರು ಅಂತ ಗೊತ್ತಿರಬೇಕು. ಉಳಿದ ಬ್ರಿಟಿಷ್ ಮತ್ತು ಫ್ರೆಂಚರು ಸಮುದ್ರ ದಾಟಿ ಬ್ರಿಟನ್ ಸೇರಿಕೊಳ್ಳಲು ಹವಣಿಸುತ್ತಿದ್ದಾರೆ ಅಂತ ಗೊತ್ತಿರಬೇಕು. ಇದೆಲ್ಲದಕ್ಕಿಂತ ಮುಖ್ಯವಾಗಿ ಬ್ರಿಟನ್ ಯೂರೋಪಿಂದ ಬೇರೆಯಾಗಿ ಸಮುದ್ರದಿಂದ ಸುತ್ತುವರೆದಿರೋ ಒಂದು ದ್ವೀಪ ದೇಶ ಅಂತ ಗೊತ್ತಿರಬೇಕು. ಜರ್ಮನಿಯವರ ಯದ್ಧ ಟ್ಯಾಂಕುಗಳು ಬ್ರಿಟಿಷರನ್ನ ಬೆನ್ನತ್ತಿಕೊಂಡು ಸಮುದ್ರದಲ್ಲಿ ಹೋಗಕಾಗಲ್ವಲ್ಲ. ಇವಾಗ ಹೆಂಗೋ ಬ್ರಿಟನ್ ಸೇರಿಕೊಂಡು ಬಿಟ್ರೆ ಸದ್ಯಕ್ಕೆ ನಿರಾಳ.

ಇದಿಷ್ಟೂ ಬೇಸಿಕ್ ಕತೆ ಗೊತ್ತಾಗೋದಕ್ಕೆ ಸಾಕು. ಆದ್ರೆ ಸಿನಿಮಾ ಬೀರುವ ಪರಿಣಾಮ ನಾವು ಯಾರು ಅನ್ನೋದ್ರ ಮೇಲೂ ನಿಂತಿರತ್ತೆ. ಇಡೀ ಬ್ರಿಟಿಷ್ ಸೈನ್ಯ ಜರ್ಮನಿ ಕೈಯಲ್ಲಿ ಸಿಕ್ಕಿಬಿದ್ದು ಪ್ರಾಣ ಉಳಿಸಿಕೊಳ್ಳಲು ತವರಿಗೆ ಓಡಿ ಬರಕೆ ತವಕಿಸ್ತಿರುವಾಗ ಸಣ್ಣಪುಟ್ಟ ಮೀನು ಹಿಡಿಯೋ ದೋಣಿಯವರೂ ಕೂಡ ಎಷ್ಟಾಗತ್ತೋ ಅಷ್ಟು ಸೈನಿಕರನ್ನ ತಾಯ್ನಾಡಿಗೆ ಕರ್ಕೊಂಡ್ ಬರನ ಅಂತ ಯುದ್ಧ ನಡೀತಿರೋ ಜಾಗಕ್ಕೆ ನುಗ್ತಾರೆ ಅಂದ್ರೆ ಅದು ಒಬ್ಬ ಬ್ರಿಟಿಷ್ ಪ್ರಜೆಯ ಎದೆ ಒಳಗೆ ಉಕ್ಕಿಸೋ ರೋಮಾಂಚನವನ್ನ ಬೇರೆ ದೇಶದವ್ರು ಅನುಭವಿಸೋದಕ್ಕೆ ಸಾಧ್ಯ ಇಲ್ಲ.

ಮುನ್ನೂರೈವತ್ತು ಸಾವಿರ ಜನ ಶತ್ರು ಸೈನಿಕರು ಒಂದು ಬೀಚ್ ಹತ್ರ ನಿಂತಿದಾರೆ ಅಂದ್ರೆ ಬಂದು ಟ್ಯಾಂಕು, ಗನ್ನಿಂದ ಪುಡಿಪುಡಿ ಮಾಡೋದು ಬಿಟ್ಟು ಜರ್ಮನ್ನರು ಯಾಕೆ ಬರೀ ವಿಮಾನದಲ್ಲಿ ಬಾಂಬ್ ಉದುರಿಸ್ತಿದಾರೆ ಅನ್ನೋ ಪ್ರಶ್ನೆ ಬಂದೇ ಬರತ್ತೆ. ಇಡೀ ಯೂರೋಪನ್ನ ಆರು ವಾರದಲ್ಲಿ ಗೆದ್ದ ಜರ್ಮನ್ನರಿಗೆ ಬೋನಿಗೆ ಬಿದ್ದಿದ್ದ ಮುನ್ನೂರು ಸಾವಿರ ಸೈನಿಕರನ್ನ ಹಿಡಿಯೋದೇನೂ ಕಷ್ಟ ಆಗ್ತಿರಲಿಲ್ಲ. ಆದರೂ ಜರ್ಮನ್ ಸೇನೆ ಯಾಕೆ ಮುಂದುವರೆಯಲಿಲ್ಲಿ ಅಂದ್ರೆ ಜರ್ಮನ್ ಏರ್‌ಫೋರ್ಸ್‌ನ ಕಮಾಂಡರ್ ಇನ್ ಚೀಫ್ ಆಗಿದ್ದವನು ಹರ್ಮನ್ ಗೋರಿಂಗ್. ಇವನೆಂತ ಮುಟ್ಟಾಳ ಹಾಗೂ ಸೊಕ್ಕಿನ ವ್ಯಕ್ತಿ ಅಂದ್ರೆ ಎರಡನೇ ಮಹಾಯುದ್ಧದ ಕೊನೆಯ ದಿನಗಳಲ್ಲಿ ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾಗ ನೀವು ಸಾಯೋದು ಸಾಯ್ತೀರ ಸತ್ತಮೇಲೆ ತಾನು ಜರ್ಮನಿಯ ಲೀಡರ್ ಆಗುವಂತೆ ಬರೆದಿಟ್ಟು ಸಾಯಿರಿ ಅಂತ ಹಿಟ್ಲರ್‌ಗೆ ಟೆಲಿಗ್ರಾಂ ಕಳಿಸಿರುತ್ತಾನೆ. ಇದರಿಂದ ಉರಿದುಬಿದ್ದ ಹಿಟ್ಲರ್ ಅವನನ್ನ ಎಲ್ಲ ಪದವಿಗಳಿಂದ ಕೆಳಗಿಳಸಿ ದೇಶದ್ರೋಹಿ ಅಂತ ಪರಿಗಣಿಸಿ ಅವನನ್ನ ಅರೆಸ್ಟ್ ಮಾಡುವಂತೆ ಆದೇಶಿಸುತ್ತಾನೆ. ಇಂತಾ ಮಂಗ್ತುಲ್ಲು ಗೋರಿಂಗ್ ಸುಮ್ನೆ ಸೈನಿಕರಿಗೆ ಯಾಕೆ ಕಷ್ಟ ಕೊಡೋದು ನನ್ನ ವಿಮಾನಗಳೇ ಸಾಕು ಬ್ರಿಟಿಷರನ್ನ ಧೂಳಿಪಟ ಮಾಡೋದಕ್ಕೆ ಅಂತ ಹಿಟ್ಲರಿಗೆ ಪುಂಗ್ತಾನೆ. ಈ ಮುಟ್ಟಾಳನ ಮಾತು ಕಟ್ಟಿಕೊಂಡು ಹಿಟ್ಲರ್ ತನ್ನ ಸೈನ್ಯಕ್ಕೆ ನೀವು ರೆಸ್ಟ್ ತಗೊಳಿ ಅಂದುಬಿಡ್ತಾನೆ. ಈ ಒಂದು ತಪ್ಪಿನಿಂದ ಮುಂದೆ ಎರಡನೇ ಮಹಾಯುದ್ಧದ ದಿಕ್ಕೇ ಬದಲಾಗತ್ತೆ.

ಇದರ ಜೊತೆಗೆ  ಸಿನಿಮಾನ ಪೂರ್ತಿ ಅಪ್ರಿಷಿಯೇಟ್ ಮಾಡಕೆ ಅದ್ರಲ್ಲಿ ಬರೋ ಡೀಟೇಲ್ಸ್‌ಗಳೂ ಗೊತ್ತಿರೋದು ಅಷ್ಟೇ ಇಂಪಾರ್ಟೆಂಟ್. ತನ್ನ ಮಗನೊಂದಿಗೆ ಸೈನಿಕರನ್ನ ಕಾಪಾಡಲು ಮುದುಕನೊಬ್ಬ ತನ್ನ ಸಣ್ಣ ಬೋಟಿನಲ್ಲಿ ಹೋಗ್ತಿರ್ತಾನೆ. ಹಿಂದುಗಡೆಯಿಂದ ವಿಮಾನಗಳು ಬರುತ್ತಿರೋ ಶಬ್ಧ ಕೇಳಿ ಹುಡುಗ ಆತಂಕದಿಂದ ನೋಡಿದಾಗ ಮುದುಕ ಅವು ನಮ್ಮವೇ "Spitfires. Greatest plane ever built" ಅಂತಾನೆ. ಅದೆಂಗ್ ಹೇಳಿದ್ರಿ ನೀವು ನೋಡ್ದಲೇ ಅಂತ ಹುಡುಗ ಕೇಳ್ದಾಗ "Rolls Royce Merlin engine. Sweetest sound you can hear out here" ಅಂತಾನೆ. 


ಇದರ ಕಾಂಟೆಕ್ಸ್ಟ್ ಗೊತ್ತಿಲ್ಲದವರಿಗೆ ಸಿನಿಮಾದಲ್ಲಿ ಇದೊಂದು ಡೈಲಾಗ್ ತರ ಅಷ್ಟೇ ಪಾಸ್ ಆಗಿರತ್ತೆ. ಆದರೆ ಕಾಂಟೆಕ್ಸ್ಟ್ ಗೊತ್ತಿದ್ದವರಿಗೆ ಇದರ ಪ್ರಾಮುಖ್ಯತೆ ತಿಳಿಯತ್ತೆ. ಇಡೀ ಎರಡನೇ ಮಹಾಯುದ್ಧದ ಗತಿಯನ್ನ ಬದಲಿಸಿದ್ದು ಎರಡೂ ಬಣಗಳ ಹತ್ತಿರವಿದ್ದ ಟೆಕ್ನಾಲಜಿ. ಆದ್ದರಿಂದಲೇ ಒಬ್ಬರ ಟೆಕ್ನಾಲಜಿ ಇನ್ನೊಬ್ಬರು ಕದಿಯೋದಕ್ಕಂತಲೇ ಗೂಡಾಚಾರರ ಪಡೆಗಳೇ ಇದ್ವು.  ವಿಮಾನಗಳು ಶತ್ರು ದೇಶದೊಳಕ್ಕೆ ಬಿದ್ದಾಗ ಪೈಲಟ್‌ಗಳು ಆ ಟೆಕ್ನಾಲಜಿ ಶತ್ರುಗಳಿಗೆ ಗೊತ್ತಾಗಬಾರದು ಅಂತ ಅವನ್ನ ಸುಟ್ಟು ಹಾಕುತ್ತಿದ್ರು. ಇದಕ್ಕೆ ಒಳ್ಳೇ ಉದಾಹರಣೆಗೆ ಅಂದ್ರೆ ಜರ್ಮನ್ನರ ಹತ್ತಿರವಿದ್ದ Messerschmitt bf 109 ವಿಮಾನ. ಇದು ಎಷ್ಟು ಪರಿಣಾಮಕಾರಿಯಾಗಿತ್ತು ಅಂದ್ರೆ ಇವತ್ತಿಗೂ ಅತಿ ಹೆಚ್ಚು ಸಂಖ್ಯೆಯಲ್ಲಿ ಉತ್ಪಾದಿಸಿದ ಫೈಟರ್ ವಿಮಾನ ಅಂದ್ರೆ ಇದೇ. ಜರ್ಮನ್ನರಿಗೆ ಮೊದಲು ಬಲಿಯಾದ ಪೋಲೆಂಡ್ ಸೋಲಿಗೂ ನಂತರ ಶರಣಾದ ಇತರ ಯೂರೋಪಿಯನ್ ದೇಶಗಳ ಸೋಲಿಗೂ ಇದರ ಕೊಡುಗೆ ಹೆವಿ. ಇಂತಾ ಬಲಶಾಲಿ ವಿಮಾನವನ್ನ ಎದುರಿಸೋದಕ್ಕೆ ಬ್ರಿಟಿಷರಿಗೆ ಅದಕ್ಕೆ ಸರಿಸಮವಾದ ಒಂದು ವಿಮಾನ ಬೇಕಿತ್ತು. ಅದೇ Spitfire. ಎಲ್ಲಾ ದೃಷ್ಟಿಯಿಂದ್ಲೂ Messerschmittಗಿಂತ ಒಂದು ಹೆಜ್ಜೆ ಮುಂದೇನೆ ಇದ್ದ ಇದಕ್ಕೆ ಶಕ್ತಿ ತುಂಬುತ್ತಿದ್ದಿದ್ದು ಅವತ್ತಿನ ಕಾಲಕ್ಕೆ ಅತ್ಯಾಧುನಿಕವಾಗಿದ್ದ ರೋಲ್ಸ್ ರಾಯ್ಸ್ ಮರ್ಲಿನ್ ಇಂಜಿನ್. ಪ್ರತಿಯೊಬ್ಬ ಬ್ರಿಟಿಷನಿಗೂ ಇದನ್ನ ಕಂಡರೆ ಹೆಮ್ಮೆ. ಯುದ್ಧಭೂಮಿಯಲ್ಲಿ ಅಸಹಾಯಕರಾಗಿ ಸಿಕ್ಕಿಬಿದ್ದ ಬ್ರಿಟಿಷ್ ಪ್ರಜೆಯೊಬ್ಬನಿಗೆ ಈ ರೋಲ್ಸ್ ರಾಯ್ಸ್ ಮರ್ಲಿನ್ ಇಂಜಿನ್ನಿನ ಶಬ್ಧ ಕೊಡಬಹುದಾದ ಧೈರ್ಯವನ್ನ ಇದರ ಹಿನ್ನೆಲೆ ಗೊತ್ತಿಲ್ಲದೇ ಹೆಂಗೆ ಊಹಿಸೋಕಾಗತ್ತೆ ಹೇಳ್ರಿ.. 

U-boatನಿಂದ ಹಿಡಿದು ಏರ್‌ಫೋರ್ಸಲ್ಲಿದ್ದ ತನ್ನ ಮಗನಿಂದ ಕಲಿತ ವಿಮಾನದ ದಿಕ್ಕುತಪ್ಪಿಸುವ ಚಾಲಾಕುಗಳಂತ ಹಲವಾರು "ಕಾಂಟೆಕ್ಸ್ಟ್"ಗಳು ಡನ್ಕರ್ಕ್ ಸಿನಿಮಾದಲ್ಲಿವೆ. ಇವೆಲ್ಲ ಗೊತ್ತಿಲ್ಲ ಅಂದ್ರೂ ಸಿನಿಮಾ ನೋಡಬಹುದು. ಆದರೆ ಕಾಂಟೆಕ್ಸ್ಟ್ ಗೊತ್ತಿದ್ದರೆ ಸಿನಿಮಾದ " ಯುನಿವರ್ಸ್" ನಮಿಗೆ ಹೆಚ್ಚು ರಿಯಲ್ ಆಗ್ತಾ ಹೋಗತ್ತೆ. ಸಿನಿಮಾ ನಮ್ಮನ್ನ ಒಳಗೆ ಎಳಕೊಳ್ಳುತ್ತಾ ಹೋಗತ್ತೆ. ಇಲ್ಲಾ ಅಂದ್ರೆ We will just be spectators, not participants. ಇವಾಗ ಅನಿಸ್ತೈತೆ ಇಷ್ಟು ದಿನ ಬೋರಿಂಗ್ ಅನಿಸಿದ, ಅರ್ಧಕ್ಕೆ ಬಿಟ್ಟ ಸಿನಿಮಾಗಳು ಬೋರಿಂಗ್ ಅನಿಸಿದ್ದಕ್ಕೆ ಅದರ ಕಾಂಟೆಕ್ಸ್ಟ್ ಗೊತ್ತಿಲ್ಲದಿದ್ದಿದ್ದೂ ಕಾರಣ ಇರಬಹುದು ಅಂತ. ಮೊದಲ ಸಲ ಸಾಧಾರಣ ಅನಿಸಿದ್ದ ಡನ್ಕರ್ಕ್ ಇವಾಗ ಮಾಸ್ಟರ್‌ಪೀಸ್ ಅನಿಸೋಕೆ ಶುರುವಾಗೇತೆ.

Thursday, 4 November 2021

ಟೂವಾದ ಥ್ರೋಟ್ ಸಿಂಗಿಂಗ್

ಮಂಗೋಲಿಯ ಅಂದ ಕೂಡ್ಲೆ ಏನ್ ತಲೆಗೆ ಬರತ್ತೆ? ಜೆಂಗಿಸ್ ಖಾನು, ಅವರ ಸಣ್ಣ ಸಣ್ಣ ಕಣ್ಣುಗಳು, ದುಂಡಗಿನ ಮುಖ, ತುದೀಲ್ ಮಾತ್ರ ನಾಕ್ ಕೂದ್ಲಿರೋ ಮೀಸೆ.. ಇದಕ್ಕೂ ಜಾಸ್ತಿ ಬಹಳ ಜನಕ್ಕೆ ಗೊತ್ತಿರಲ್ಲ. ಗೊತ್ತಿರೋದಕ್ಕೆ ಅದೇನು  ಪಕ್ಕದ ತಮಿಳ್ನಾಡಲ್ವಲ್ಲ. ನಾಕೈದು ಸಾವಿರ ಕಿಲೋಮೀಟರ್ ದೂರ ಇರೋ ದೇಶ. ಬಿಡಿ, ನಾ ಹೇಳಬೇಕಂತಿರೋದು ಈ ದೇಶದ ಬಗ್ಗೆ ಅಲ್ಲ. ಮಂಗೋಲಿಯಾಕ್ಕೆ ಅಂಟಿಕೊಂಡಿರೋ "ಟೂವಾ" ಅನ್ನುವ ರಷ್ಯಾ ದೇಶಕ್ಕೆ ಸೇರಿದ ರಾಜ್ಯದ ಬಗ್ಗೆ.

ಟೂವಾ ರಷ್ಯಾ ದೇಶಕ್ಕೆ ಸೇರಿದ್ರೂ ಊಟತಿಂಡಿ, ಬಟ್ಟೆಬರೆ, ದೇವರುದಿಂಡ್ರು, ಆಚಾರ ವಿಚಾರದಲ್ಲಿ ಮಂಗೋಲಿಯಾಕ್ಕೇ ಹೆಚ್ಚು ಹತ್ತಿರ. ಹಂಗಾಗಿ‌ ಮಂಗೋಲಿಯಾನ ಮೆನ್ಷನ್ ಮಾಡಬೇಕಾಗಿ ಬಂತು. ತೀರಾ ಮರುಭೂಮೀನೂ ಅಲ್ಲದ ಗಿಡ ಮರ ಬೆಳೆಯುವ ಫಲವತ್ತಾದ ಮಣ್ಣೂ ಅಲ್ಲದ ಈ ಸೀಮೆಗೇ ವಿಶಿಷ್ಟವಾದ ಭೂಲಕ್ಷಣ ಇಲ್ಲಿನದು. ಬರೇ ಹುಲ್ಲಿನಿಂದ ಕೂಡಿದ, ನೋಡೋ ಅಷ್ಟು ದೂರಾನೂ ಬಯಲೇ ಇರೋ ಈ ತರ ಭೂ ಪ್ರದೇಶಕ್ಕೆ ಸ್ಟೆಪ್ಪಿ ಅಂತ ಕರಿತಾರೆ. ಹಲವಾರು ಪರ್ವತ ಶ್ರೇಣಿಗಳು ಅಡ್ಡ ಇರೋದ್ರಿಂದ ಸಮುದ್ರದ ಕಡೆಯಿಂದ ಹೊರಡೋ ಮಳೆಯ ಮೋಡಗಳು ಪರ್ವತಗಳನ್ನ ದಾಟಿ ಅಲ್ಲಿವರೆಗೆ ತಲುಪೋದೇ ಇಲ್ಲ. ಹಂಗಾಗಿ ಇಲ್ಲಿ ಮಳೆ ಬೀಳೋದೆ ಇಲ್ಲ ಅನ್ನುವಷ್ಟು ಕಮ್ಮಿ. ಇಲ್ಲಿ ಮರಗಳೂ ಸೈತ ಬೆಳೆಯೋದಿಲ್ಲ. ಇಂತ ಭೂಮಿಯಲ್ಲಿ ಕೃಷಿ ಹೆಂಗೆ ಸಾಧ್ಯ. ‌ಅದಕ್ಕೇ ಇಲ್ಲಿನ ಬಹುತೇಕರು ಕುದುರೆ ಮೇಲೆ ಹತ್ತಿ ಕುರಿ ಮೇಯಿಸಿಕೊಂಡು ಆ ವಿಸ್ತಾರ ಬಯಲುಗಳಲ್ಲಿ ಓಡಾಡಿಕೊಂಡು ಜೀವನ ಕಳೆಯೋ ಅಲೆಮಾರಿಗಳು. ಇಂಥ ವಿಶಿಷ್ಟ ಜಾಗದಲ್ಲಿ ಹುಟ್ಟಿಕೊಂಡ ಒಂದು ವಿಶಿಷ್ಟ ಸಂಗೀತ ಪ್ರಕಾರಾನೇ ಥ್ರೋಟ್ ಸಿಂಗಿಂಗ್. ಬಯಲಿನಲ್ಲಿ ಶಬ್ಧ ಬಹಳ ದೂರ ಸಾಗೋದ್ರಿಂದ ಈ ಸ್ಟೆಪ್ಪಿ ಥ್ರೋಟ್ ಸಿಂಗಿಂಗ್‌ಗೆ ಹೇಳಿ ಮಾಡಿಸಿದ ಜಾಗ.

ಈ ಜನ ಒಂದು ಜಾಗದಲ್ಲಿರದ ಅಲೆಮಾರಿಗಳಾದ್ರಿಂದ ಮಾಮೂಲಿ ಜನರ ತರ ಗುಡಿಗಿಡಿ ಕಟ್ಟಿ ದೇವ್ರನ್ನ ಪೂಜೆ ಮಾಡೋಕೆ ಟೈಮೂ, ಅನುಕೂಲ ಎರಡೂ ಇರಲಿಲ್ಲ ಅನಿಸುತ್ತೆ. ಹಂಗಾಗಿ ಇವರು ಕಣ್ಣಿಗೆ ಕಾಣೋ ಪ್ರತಿಯೊಂದು ವಸ್ತುವನ್ನೂ ದೇವರು ಅಂತ ಪೂಜಿಸ್ತಿದ್ರು. ಕಲ್ಲು, ಮಣ್ಣು, ಇದ್ದಿಲು, ಬೂದಿ ಹಿಂಗೆ ಎಲ್ಲಾನು. ಈ ಕಾಲದವ್ರು ಅನಿಮಿಸಂ ಅಂತಾರಲ್ಲ ಅದು. ಅದಕ್ಕೇನೆ ಇವರ ಸಂಗೀತ ವಾಧ್ಯಗಳೆಲ್ಲ ಪ್ರಕೃತಿಯ ಬೇರೆ ಬೇರೆ ಶಬ್ಧಗಳ ಅನುಕರಣೆ ತರಾನೆ ಇರ್ತವೆ. ಥ್ರೋಟ್ ಸಿಂಗಿಂಗ್‌ ಹುಟ್ಟಿದ್ದೇ ಈ ಅನುಕರಣೆಯ ಮೂಲಕ ಅಂತ ಹೇಳ್ತಾರೆ.

ಥ್ರೋಟ್ ಸಿಂಗಿಂಗ್ ಅಂದ್ರೆ ಮೈ ಬಿಗಿ ಹಿಡಿದು ಗಂಟಲ ಆಳದಿಂದ ಗಟ್ಟಿ ಧ್ವನಿ ಹೊರಡಿಸೋದು. ನಾವು ಕೈ ಊರಿ ಮೇಲೆ ಏಳುವಾಗ್ಲೋ ಏನಾದ್ರು ಎತ್ತುವಾಗ್ಲೋ ತಿಣುಕಿದಾಗ ಹೊರಡುತ್ತಲ್ಲ ಸೌಂಡು ಸೇಮ್ ಅದೇ ತರ. ಇದರ ಇನ್ನೊಂದು ವೈಶಿಷ್ಟ್ಯತೆ ಅಂದ್ರೆ ಎರಡು ಶಬ್ಧಗಳನ್ನ ಒಟ್ಟಿಗೆ ಹೊರಡಿಸೋದು.‌ ಸಾಮಾನ್ಯ ಜನರಿಗೆ ಒಂದು ಸಲಕ್ಕೆ ಒಂದು ಶಬ್ಧ ಮಾತ್ರ ಹೊರಡಿಸೋಕೆ ಆಗೋದು. ಆದ್ರೆ ಈ ಹಾಡುಗಾರರು ಗಂಟಲಿಂದ ಬರೋ ಹಮ್ಮಿಂಗ್ ಜೊತೆಗೇನೆ ಶಿಳ್ಳೆ ಸದ್ದನ್ನೂ ಹೊರಡಿಸ್ತಾರೆ.

ಭಾಷೇನೆ ಗೊತ್ತಿರದಿದ್ರೂ ಆ ದೇಶದ ಜೊತೆಗೆ, ಆ ಹುಲ್ಲಿನ ಬಯಲಿನ ಜೊತೆಗೆ, ಅವರ ಕುದುರೆಯ ಲಾಗಾಮು ಜೊತೆಗೆ, ಗಾಳಿಗೆ ರಪರಪ ಹಾರಾಡ್ತಿರೋ ಅವರ ಜೋಪಡಿ ಜೊತೆಗೆ ಮಾತುಕತೆ ಆಡ್ತಿರೋ ತರ ಅನ್ಸತ್ತೆ ಈ ಮ್ಯೂಸಿಕ್ ಕೇಳ್ತಾ ಇದ್ರೆ. ಕೆಳಗಡೆ ಇರೋ ಲಿಂಕಲ್ಲಿ ಒಂದಷ್ಟು ಈ ಹಾಡುಗಳಿದಾವೆ. ಬಿಡುವಿದ್ರೆ ಕೇಳಿ :)

 




Wednesday, 7 July 2021

ಶಿವಣ್ಣ ಹೇಳಿದ್ದ ಕತೆಗಳು

ನಮ್ಮಜ್ಜಿ ಊರಲ್ಲಿ ಶಿವಣ್ಣ ಅಂತ ಒಬ್ಬ ಇದ್ದ. ಇವ್ನೇನ್ ಅದೇ ಊರಾಗ್ ಇರ್ತಿದ್ದವ್ನಲ್ಲ, ನಾನು ಅಲ್ಲಿ ಮೂರ್ ವರ್ಷ ಓದಿದ್ರೂ ಯಾವಾಗ್ಲೋ ಒಂದೆರಡ್ ಸಲ ನೋಡಿದ್ದಷ್ಟೇ. ನಂಗ್ ಅಂತಾ ಪರಿಚಯಾನೂ ಅಲ್ಲ. ಅವತ್ತು ಒಂದಿನ ಇವ್ನ್ ಸಿಕ್ಕ್ ಮಾತಾಡಿದ್ದು ಅಮ್ಮಮ್ಮಾಂದ್ರೆ ಎರಡ್ ಗಂಟೆ ಇರ್ಬೋದು. ಅದೂ ಬರೋಬ್ಬರಿ 15 ವರ್ಷದ್ ಕೆಳಗೆ. ಇವತ್ತು ಇದ್ಕಿದ್ದಂಗೆ ನೆನಪಾದ. ಇವಾಗ ಹಿಂದಕ್ ತಿರುಗಿ ನೋಡಿದ್ರೆ ಅವತ್ ಇವನು ಎರಡ್ ಗಂಟೆ ಮಾತಾಡಿದ್ದು ಎಂತ ಒಂದು ಇಂಪಾರ್ಟೆಂಟ್ ಮುಮೆಂಟ್ ನನ್ ಲೈಫಲ್ಲಿ ಅಂತ ಅರಿವಾಯ್ತು. ತೇಜಸ್ವಿ ಪರಿಸರದ ಕತೆಯಲ್ಲಿ ತಮಗೆ ಇಂತದರಲ್ಲೆಲ್ಲ ಆಸಕ್ತಿ ಹುಟ್ಟಿದ್ದು ಹೆಂಗೆ ಅಂತ ಅದರ ಮೂಲ ಹುಡುಕ್ತಾ ಹೇಳ್ತಾರೆ- ಒಂದಿನ ಅವರಪ್ಪನ ಜತೆಗೆ ಮೈಸೂರಲ್ಲಿ ವಾಕಿಂಗ್ ಹೋಗುವಾಗ ಕಾಡ್ ಇಲಿಗಳ ಬಿಲ ನೋಡ್ತಾರಂತೆ. ಅವರ ತಮ್ಮನ ಜತೆಗೆ ಆ ಬಿಲಗಳಿಗೆಲ್ಲಾ ಕಲ್ಲು ತುಂಬಿ ಮುಚ್ಚಿಬಿಡ್ತಾರಂತೆ. ತಿರುಗು ದಿನ ಬಂದು ನೋಡಿದರೆ ಇಲಿಗಳು ಆ ಕಲ್ಲೆಲ್ಲ ತೆಗೆದು ದೂರ ಹಾಕಿ ಮತ್ತೆ ತಮ್ಮ ಬಿಲಗಳನ್ನ ಕ್ಲೀನ್ ಮಾಡ್ಕೊಂಡಿದ್ವಂತೆ. ಬರೀ ಸ್ಕೂಲು, ಮೇಷ್ಟ್ರು, ಫ್ರೆಂಡ್ಸು ಅಂತ ಇದ್ದಿದ್ ನಮ್ ಲೈಫಲ್ಲಿ ನಮ್ಮನ್ನ ಬೇರೊಂದು ಲೋಕಕ್ಕೆ, ವಿಶ್ವಸಮಾಜದ ಹತ್ರಕ್ಕೆ ಕೊಂಡೊಯ್ದಿದ್ದು ಈ ಇಲಿಗಳು ಅಂತ ಹೇಳ್ತಾರೆ. ಅದೇ ತರ ನನಿಗೆ ವಿಶ್ವಸಮಾಜ ತೋರ್ಸಿದ್ದು ಈ ಶಿವಣ್ಣ. 

ನಮ್ಮಜ್ಜಿ ಊರು ಒಂದು ಮುನ್ನೂರು ನಾನೂರು ಮನೆ ಇದ್ದ ಕುಗ್ರಾಮ. ಯಾವ್ದೇ ಹೇಳ್ಕೊಳೋ ಅಂತ ರೋಡ್ ಪಕ್ಕ ಇಲ್ದೇ ಇದ್ದಿದ್ರಿಂದ ಒಂದೇ ಒಂದು ಗೌರ್ಮೆಂಟ್ ಬಸ್ ಇದ್ದಿದ್ದು ಅಲ್ಲಿಗೆ. ಅದೊಂದೇ ದಿನಕ್ ಮೂರ್ ಸಲ ದಾವಣಗೆರೆಗೆ ತಿರ್ಗಾಮುರ್ಗಾ ಓಡಾಡ್ತಿತ್ತು. ಬೆಳಿಗ್ಗೆ ಆರೂವರೆಗೆ ಊರ್ ಬಿಟ್ಟು ಒಂಬತ್ ಗಂಟೆಗೆ ವಾಪಸ್ ಬರ್ತಾ ನಾಕೈದ್ ನ್ಯೂಸ್ ಪೇಪರ್ ತರ್ತಾ ಇತ್ತು. ಅದು ಊರಿನ್ ಲೈಬ್ರರಿ ಲೆಕ್ಕದಲ್ಲಿ. ಆದ್ರೆ ಅಲ್ಲಿ ಲೈಬ್ರರಿ ಅಂತ ಯಾವ್ ಬಿಲ್ಡಿಂಗೂ ಇರ್ಲಿಲ್ಲದ ಕಾರಣ ಎಲ್ರೂ ಹತ್ತು ಗಂಟೆಗೆ ಸ್ಕೂಲ್ ಬೆಲ್ ಹೊಡೆಯೋವರೆಗೆ ಸಾಲಿಗುಡಿ ಹತ್ರ ಪೇಪರ್ ಹರಡಿಕೊಂಡು ಓದ್ತಿದ್ರು. ಮಾಮೂಲಿ ದಿನ ಯಾವನೂ ಕ್ಯಾರೆ ಅಂತಿರಲಿಲ್ಲ. ಕ್ರಿಕೆಟ್‌‌ ಇದ್ದ ತಿರುಗು ದಿನ ಮತ್ತೆ ಶುಕ್ರವಾರ ಸಿನಿಮಾ ಪುರವಣಿ ಇದ್ದಾಗ ಮಾತ್ರ ಅದಕ್ಕೆ ಎಲ್ರೂ ಮುಗಿ ಬೀಳ್ತಿದ್ದಿದ್ದು. ಅವನೊಂದ್ ಶೀಟು ಇವನೊಂದ್ ಶೀಟು ಓದಿ ಯಾವ್ದೋ ಪೇಪರ್ ಶೀಟನ್ನ ಇನ್ಯಾವ್ದ್ರ ನಡುವೇನೋ ಇಟ್ಟು ಎಲ್ಲಾ ಕಳಸಂಬಳಸ ಆಗಿರೋದು. ಅರ್ಧ ಸುದ್ದಿ ಕೊಟ್ಟು 8ನೇ ಪುಟದಲ್ಲಿ ಮುಂದುವರೆಸಿದ್ದರೆ ಅದ್ಯಾವನತ್ರ ಇದೆ ಅಂತ ಹುಡುಕಾಡಬೇಕಿತ್ತು. 

ಊರಿನ ಮಧ್ಯ ಕ್ರಿಕೆಟ್ ಗ್ರೌಂಡ್ ತರ ಖಾಲಿ ಜಾಗ, ಅದ್ರ ಸುತ್ತಾ ಕುಂತ್ಕಳಕೆ ಇರೋ ಪೆವಿಲಿಯನ್ ತರ ಮನೆಗಳು. ಹಿಂಗಿತ್ತು ಆ ಊರು. ನಮ್ಮಜ್ಜಿ ಮನೆ ಇದ್ದಿದ್ದು ನಟ್ಟ ನಡುವೆ ಅಂತ ಹೇಳ್ಬೋದು. ಹಂಗಾಗಿ ಊರ ಗಂಡಸ್ರೆಲ್ಲಾ ಕ್ರಿಕೆಟ್ ನೋಡೋಕೆ ನಮ್ಮನೆಗೇ ಬರ್ತಿದ್ರು. ಹಿಂಗೆ ಬಂದವ್ರೆಲ್ಲಾ ಮನೆ ಪಕ್ಕ ಗೋಡೆಗೆ ಉಚ್ಚೆ ಹೊಯ್ದು ಉಚ್ಚೆ ಸಿನುಗು ಹೊಡಿತಾ ಇತ್ತು. ಅದಕ್ಕೇ ನಮ್ಮಜ್ಜಿಗೆ ಇವರನ್ನ ಕಂಡ್ರೆ ಆಗ್ತಿರಲಿಲ್ಲ. ಯಾರೂ ಮನೆ ಹತ್ರ ಉಚ್ಚೆ ಹೊಯ್ಯದಂತೆ ನೋಡ್ಕೊಳೋ ಜವಾಬ್ದಾರಿ ನನಿಗ್ ಬೀಳ್ತಿತ್ತು.  ಕ್ರಿಕೆಟ್ ಇಲ್ದಾಗ್ಲೂ ಎಲ್ಲಾ ಬೈಸರೆ ಸೇರಿ ಉಣ್ಣೋ ಟೈಮ್ ಆಗೋ ತನಕ ಅಲ್ಲೇ ಮಾತಾಡ್ತಾ ಬಿದ್ದಿರ್ತಿದ್ರು. ಹಂಗಾಗಿ ನನಿಗೆ ಇಂತವ್ರ ಸಂಗ ಎಲ್ಲಾ ಇತ್ತು. ಆವಾಗ ನನಿಗೆ ಹತ್ತು ವರ್ಷ ಇರಬೇಕು. ಸುಮ್ನೆ ಹೋಗಿ ಇವರ ಗುಂಪಿನ ನಡುವೆ ಕುಂತು ದೊಡ್ಡವ್ರ ದೊಡ್ಡ ಮಾತೆಲ್ಲ ಆಲಿಸೋದೆ ಅವಾಗ  ಎಂಟರ್ಟೇನ್ಮೆಂಟ್. ನನಿಗೆ ಬ್ಲೂಫಿಲ್ಮ್ ಬಗ್ಗೆ ಎಲ್ಲಾ ಗೊತ್ತಾಗಿದ್ದು ಇವ್ರಿಂದಾನೆ. ಇದ್ನೆಲ್ಲಾ ಯಾಕ್ ಹೇಳ್ದೆ ಅಂದ್ರೆ ಹೊರಪ್ರಪಂಚದಿಂದ ಬಹಳ ಕಮ್ಮಿ ಸಂಪರ್ಕ ಇದ್ದು ಅದ್ರಷ್ಟಕ್ಕದೇ ಒಂದ್ ಪ್ರಪಂಚ ಆಗಿತ್ತು ಆ ಊರು ಅಂತ ನಿಮ್ ತಲೇಲಿರ್ಲಿ ಅಂತ. ಇದ್ದಿದ್ ಮೂರೇ ಮೂರ್ ಟಿವಿ ಚಾನಲ್ ಅವಾಗ. ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ ಅಂದ್ರೇನು ಅಂತ ಗೊತ್ತೇ ಇರಲಿಲ್ಲ. 

ಸಿಚುವೇಶನ್ ಹಿಂಗಿರುವಾಗ ಸಿಕ್ಕಿದ್ದು ಶಿವಣ್ಣ. ಅದೆಂಗ್ ಮಾತುಕತೆ ಶುರುವಾಯ್ತೋ ಗೊತ್ತಿಲ್ಲ. ಆದ್ರೆ ನಂಗ್ ತಲೇಲಿರೋ ಚಿತ್ರ ಅಂದ್ರೆ ಊರ್ ನಡುವೆ ಅಂದ್ರೆ ನಮ್ಮಜ್ಜಿ ಮನೆ ಮುಂದೆ ಇದ್ದ ಜಗ್ಗೋ ಬೋರಿಗೆ (hand pump) ಶಿವಣ್ಣ ಕೈ ಒರಗಿಸಿಕೊಂಡು ಮಾತಾಡ್ತಿದ್ದಿದ್ದು ಉಳಿದೋರೆಲ್ಲ ಸುತ್ತಾ ಕುತ್ಕೊಂಡು, ನಿಂತ್ಕೊಂಡು ಅವನ್ ಮಾತ್ ಕೇಳ್ತಿದ್ದಿದ್ದು. ಅದೇನು ವೈರಾಗ್ಯ ಬಂದಿತ್ತೋ ಏನ್ ಕತೇನೋ ಇದ್ದಿದ್ದ್ ಐದಾರೆಕ್ರೆ ಹೊಲ ಮಾರಿ ವರ್ಲ್ಡ್ ಟೂರ್ ಹೊರಟಿದ್ನಂತೆ ಶಿವಣ್ಣ. ಅಂತೂ ನಮ್ಮೂರವ್ನೊಬ್ಬ ಏರೋಪ್ಲೇನಾಗ್ ಹೋಗ್ತಾನೆ ಅಂತ ಹೆಮ್ಮೆ ಆಯ್ತು ಎಲ್ಲಾರ್ಗೂ. ಆದ್ರೆ ಶಿವಣ್ಣ ಅಲ್ಲಾಲ್ಲ ನಾನ್ ಹೋಗ್ತಿರೋದು ಸೈಕಲ್ ಮೇಲೆ ಅಂದಾಗ ಮಾತ್ರ ಎಲ್ಲಾರ್ಗೂ ಇವ್ನೆಲ್ಲೋ ಬುಲ್ಡೇ ಹೊಡಿತಿದಾನೆ ಅನಿಸ್ತು. ಶಿವಣ್ಣ ಮಾಮೂಲಿ ಸೈಕಲ್ ಅಲ್ಲ ಮುವತ್ತೈದ್ ಸಾವ್ರದ್ ಸೈಕಲ್ಲು ಅಂದಾಗ ಎಲ್ರಿಗೂ ಮತ್ತೆ ಕಿವಿ ನಿಗುರಿದ್ವು. ಅವಾಗಿನ್ ಕಾಲಕ್ಕೆ ಮುವತ್ತೈದ್ ಸಾವ್ರಕ್ಕೆ ಎಂತಾ ಬೈಕ್ ಬರ್ತಿತ್ತು ಲೆಕ್ಕ ಹಾಕ್ರಿ. ಕೆಲುವ್ರಿಗೆ ಇವ್ನಿಗ್ ಹುಚ್ ಹಿಡ್ದಿದೆ ಅನ್ಸಿರಬೇಕು. ಆದ್ರೆ ಶಿವಣ್ಣ ಮುಂದುಕ್ ಹೇಳ್ತಾ ಹೇಳ್ತಾ ಹೋದಂಗೆ ವಾತಾವರಣ ಬಿಗಿ ಏರ್ತಾ ಹೋಯ್ತು. ಸೈಕಲ್ ಅಂದ್ರೆ ನಮ್ ತಲೇಲಿದ್ದಿದ್ದು ಮಾಮೂಲಿ ಹರ್ಕ್ಯುಲಸ್ ಸೈಕಲ್ಲು. ಆದ್ರೆ ಅಂತ ಸೈಕಲಲ್ಲಿ ಯಾವನಾದ್ರು ಪ್ರಪಂಚ ಸುತ್ತಕಾಗತ್ತ. ಸೈಕಲಲ್ಲಿ ಭೂಮಿ ಸುತ್ತಿ ವಾಪಸ್ ಊರಿಗೆ ಬರೋ ಅಷ್ಟ್ರಲ್ಲಿ ನಾನು ಬದುಕಿರೋದೆ ಡೌಟು, ಬಂದ್ರೂ ನಿಮಗೆಲ್ಲ ಮಕ್ಳು ಮರಿ ಆಗಿ ಕೂದ್ಲು ಬೆಳ್ಳಗಾಗಿರ್ತವೆ ಅಂದ. ಅಷ್ಟು ವರ್ಷಕ್ಕೆ ಆಗೋ ಅಷ್ಟು ಸರಕನ್ನ ಮಾಮೂಲಿ ಸೈಕಲ್ ಮೇಲೆ ಒಯ್ಯೋಕೆ ಇದೇನ್ ಹೆಳವರು ಶಿರ್ಸಿಯಿಂದ ಹರಿಹರಕ್ ಬಂದಂಗಾ? ಒಪ್ಪತಕ್ಕದ್ದೇ ಅನಿಸ್ತು ಎಲ್ರಿಗೂ. ಮುವತ್ತೈದ್ ಸಾವ್ರದ್ ಸೈಕಲ್ಲು ಎಷ್ಟ್ ಸ್ಪೀಡಾಗಿ ಓಡ್ಬೋದು ಅಂತ ನನ್ ತಲೇಲಿ. ಶಿವಣ್ಣನ್ ಕತೆ ಮುಂದುವರೀತು. "ಆ ಸೈಕಲ್ಲಾಗ್ ಹಿಮಾಲಯ ದಾಟಕಾಗಲ್ಲ.  ಯಾವ್ ಯಾವ್ದೋ ದೇಶದಲ್ಲಿ ಯಾವ್ ಯಾವ್ದೋ ಕಾಡುಮೇಡಲ್ಲಿ ಹೋಗ್ಬೇಕಾಗತ್ತೆ. ಬೇಟೆ ಪ್ರಾಣಿಗಳು ಮರದ್ ಮೇಲೆ ಹೊಂಚಾಕಿಕೊಂಡು ಗೋಣು ಮುರಿಯೋಕೆ ಕಾಯ್ತಿರ್ತವೆ. ಅಂತ ದಾರಿಲೆಲ್ಲ ಹೋಗಬೇಕಾಗತ್ತೆ. ನಾವು ಒಂದೈವತ್ತು ಜನರ ಟೀಂ ಜತೆಗೆ ಹೋಗ್ತೀವಿ. ಜಾಸ್ತಿ ಜನ ಒಟ್ಟಿಗೆ ಇದ್ರೆ ಸೇಫ್ ತಾನೆ. ಅಂತದಕ್ಕೆ ಅಂತಾನೆ ಆರ್ಡರ್ ಕೊಟ್ಟು ಮಾಡ್ಸೋ ಸೈಕಲ್ ಅದು"

ಒಂದೊಂದ್ ದೇಶದಲ್ಲಿ ಮನುಷ್ರನ್ನೇ ಹಿಡ್ಕೊಂಡು ತಿನ್ನೋ ನರಭಕ್ಷಕರು ಇದಾರಂತೆ. ನೀವಿನ್ನೂ ಹತ್ರ ಹೋಗಿ ಮಾತಾಡ್ಸೋದ್ರೊಳಗೆ ವಿಷದ ಬಾಣ ಊದಿ ಸಾಯ್ಸೇ ಬಿಟ್ಟಿರ್ತಾರಂತೆ. ಅದನ್ನೆಲ್ಲ ಹೆಂಗ್ ಎದ್ರುಸ್ತಿರ ಅಂತ ಕೇಳಿದ್ಕೆ ಗೊತ್ತಿಲ್ಲ ಅಂದ ಶಿವಣ್ಣ. ಅದಕ್ಕೇ ತಾನೆ ಹೋಗ್ತಿರೋದು. ತಿಳ್ಕಳಕೆ. ಒಕೆ. ಇನ್ನು ಕೆಲವು ಕಡೆ ರಾಜಕೀಯ ಗಲಭೆಗಳು, ಭಯೋತ್ಪಾದಕರ ಹಾವಳಿ ಇರತ್ತಂತೆ. ಇವರು ಹಂಗಾಸೇ ಹಾದು ಹೋಗಬೇಕಾಗಿರೋದ್ರಿಂದ ಅವರೆನ್ನಲ್ಲ ಪರಿಚಯ ಮಾಡ್ಕೊಂಡು ಅವರಿಗೆ ಕುಡಿಯಕೆ, ತಿನ್ನಕೆ ಕೊಟ್ಟು ಮುಂದುಕ್ ಹೋಗೋ ಅಂತ ಪರಿಸ್ಥಿತಿನೂ ಬರಬೋದಂತೆ. ಹಂಗೇ ಬಿನ್ ಲ್ಯಾಡೆನ್ ಜತೆಗೆ ಶಿವಣ್ಣ ಅನ್ನ ಸಾರು ತಿಂತಿರೋ ಚಿತ್ರ ಪಾಸಾಯ್ತು ಕಣ್ಮುಂದೆ. 

ತಿನ್ನೋ ವಿಷ್ಯ ಬಂದಾಗ ಹೊಟ್ಟೆಗೆ ಏನು ಅನ್ನೋ ಪ್ರಶ್ನೆ ಬಂತು. ಸೈಕಲ್ ಕ್ಯಾರಿಯರಲ್ಲಿ ಏನ್ ಸೋನ ಮಸೂರಿ ಚೀಲ ಇಟ್ಕೊಂಡ್ ಹೋಗಕಾಗತ್ತ? ಶಿವಣ್ಣ ಹೇಳಿದ ಊಟಕ್ಕೆಲ್ಲ ಏನೂ ರೇಷನ್ ಒಯ್ಯಲ್ಲ. ದಾರೀಲಿ ಸಿಕ್ಕಿದ್ ಹಣ್ಣು ಹಂಪಲು ತಿಂದ್ಕೊಂಡ್ ಇರ್ತೀವಿ ಅಂತ. ಒಂದೊಂದ್ ವಿಷದ್ ಹಣ್ಣು, ಬೀಜಗಳು ಸಿಕ್ಬಿಟ್ರೆ? ಅದಕ್ಕೇ ಅಂತ ಹೋಗೋ ಮುಂಚೆ ಕ್ಲಾಸ್ ಮಾಡ್ತಾರಂತೆ ಏನ್ ತಿನ್ಬೋದು ಏನ್ ತಿನ್ಬಾರ್ದು, ಏನೂ ಇಲ್ದಲೆ ಹೆಂಗ್ ಬದುಕದು ಅಂತೆಲ್ಲ. ಹಿಂಗೇ ಶಿವಣ್ಣ ಒಂದೊಂದ್ ದೇಶದ್ ಬಗ್ಗೇನೂ ಹೇಳ್ತಾ ಅವರ ಊಟ, ತಿಂಡಿ, ಅವರು ಬದುಕೋ ರೀತಿ ಹೆಂಗೆ ನಮ್ ತರ ಇರಲ್ಲ, ಆಯಾ ದೇಶದಲ್ಲಿ ಇಂತಿಂತ ಕಾಡುಪ್ರಾಣಿಗಳ್ ಇರ್ತಾವೆ, ಆಫ್ರಿಕಾದಲ್ಲಿ ಬ್ಲಾಕ್ ಮಾಂಬಾ ಅಂತ ಹಾವು ಹೆಂಗೆ ಕಚ್ಚಿದ್ ಹತ್ ನಿಮ್ಷದಲ್ಲಿ ಸಾಯ್ಸೋ ಅಷ್ಟು ವಿಷಕಾರಿ. ಹೆಂಗೆ ಭೂಮಿ ಮೇಲ್ ಮೇಲಕ್ (north) ಹೋದಂಗೆ ನಮ್ಮೂರಲ್ಲಿರೋ ತರ ಸೂರ್ಯ ನೆತ್ತಿ ಮೇಲಿರಲ್ಲ ಒಂದ್ ಕಡೆ ಸೈಡಲ್ಲಿರ್ತಾನೆ, ಅಂತ ಕಡೆ ಬರೇ ಆರ್ ಗಂಟೆ ಕತ್ಲು, ಹದ್ನೆಂಟ್ ಗಂಟೆ ಹಗಲಿರತ್ತೆ ಅಂತೆಲ್ಲ ಹೇಳ್ದ. 

ಭೂಮಿ ಮುಕ್ಕಾಲ್ ಭಾಗ ಸಮುದ್ರ ಐತಲ್ಲ ಅದೆಂಗ್ ಬರೇ ಸೈಕಲ್ಲಾಗೇ ಸುತ್ತೀರ ಅಂತ ಒಬ್ಬ ಬುದ್ವಂತ ಕೇಳ್ದ. ಅದಕ್ಕೆ ಶಿವಣ್ಣ ಎಲ್ಲಾ ಖಂಡಗಳು ಹೆಚ್ಚು ಕಮ್ಮಿ ಒಂದ್ಕೊಂದು ಕನೆಕ್ಟ್ ಆಗಿದಾವೆ, ಅಮೆರಿಕಾಕ್ ಹೋಗ್ಬೇಕಾದ್ರೆ ಮಾತ್ರ ಒಂದ್ ಕಡೆ ರಷ್ಯಾ-ಅಮೆರಿಕ ನಡುವೆ ಬೆರಿಂಗ್ ಸುಮುದ್ರ ಅಂತ ಬರತ್ತಂತೆ. ಅಲ್ಲಿ ಒಂದೈವತ್ ಕಿಲೋಮೀಟ್ರು ಸೈಕಲ್ನ ಹಡಗ್ನಾಗ್ ಹಾಕೊಂಡ್ ಹೋಗ್ಬೇಕಂತೆ. ಹಿಂಗೇ ಎರಡ್ ಗಂಟೇಲಿ ಎಲ್ರಿಗೂ ಇಡೀ ಭೂಮಿ ಸುತ್ತಾಕ್ಸಿದ ಶಿವಣ್ಣ. ಯಾರೂ ಜೋರಾಗ್ ಉಸ್ರೂ ಬಿಡ್ಲಿಲ್ಲ ಹಂಗ್ ಕೇಳಿದ್ರು. ಶಿವಣ್ಣ ಹೇಳಿದ್ದೆಲ್ಲ ಎಲ್ರ ತಲೇಲಿ ಪಿಚ್ಚರ್ ತರ ಓಡ್ತಾ ಇತ್ತು. ಕರ್ವಾಲೋ ತೇಜಸ್ವಿ ಮನೇಲಿ ಮಂದಣ್ಣ ಅವ್ರನ್ನೆಲ್ಲ ಕುಂದ್ರುಸ್ಕೊಂಡು ಸೃಷ್ಟಿಯ ಉಗಮ, ಡೈನೋಸಾರು, ಓತಿಕ್ಯಾತದ್ ಬಗ್ಗೆ ಹೇಳ್ತಾರಲ್ಲ. ಸೇಮ್ ಅದೇ ಸೀನ್.

ಇವಾಗ ಬ್ಲಾಕ್ ಹೋಲೂ, ಕ್ವಾಂಟಂ ಫಿಸಿಕ್ಸು, ಬಿಗ್ ಬ್ಯಾಂಗ್ ಬಗ್ಗೆ ಎಲ್ಲಾ ಕುತೂಹಲ ಹುಟ್ಟಿರೋದಕ್ಕೆ ಅವತ್ ಶಿವಣ್ಣ ಮಾತಾಡಿದ್ದೇ ಬೀಜ ಇರಬೇಕು. ಅವನು ಅವಾಗ್ಲೇ ದೇಹದಾನ ಅಂತ ಮಾಡಿದೀನಿ ನಾನ್ ಸತ್ಮೇಲೆ ಬಾಡಿನ ಮೆಡಿಕಲ್ ಕಾಲೇಜವ್ರು ತಗೊಂಡ್ ಹೋಗ್ತಾರೆ ಅಂದಿದ್ದ. ಅದಾದ್ಮೇಲೆ ಅವ್ನು ಕಾಣಲೇ ಇಲ್ಲ. ವರ್ಲ್ಡ್ ಟೂರ್ ಹೋದ್ನ ಅಂತಾನು ಗೊತ್ತಿಲ್ಲ. ಅವನ ಸಂಬಂಧಿಕರನ್ನ ಕೇಳಿದ್ರೆ ಏನಾದ್ರು ಗೊತ್ತಾಗಬಹುದು. ಟಾಮ್ ಹಾರ್ಡಿ- ಜಾಕ್ ನಿಕೋಲಸ್ ಹೈಬ್ರಿಡ್ ತರ ಇರೋ ಮುಖ, ಏಂಜಲೀನ ಜೋಲಿ ತುಟಿ, ಹಿಂದ್ಗಡೆ ಒಂದ್ ಪೋನಿ ಟೇಲ್ ಎಲ್ಲಾ ನಿನ್ನೆ ನೋಡಿರೋ ತರ ಐತೆ. ಇವಾಗ್ ಏನ್ ಮಾಡ್ತಿದಾನೆ ಅಂತ ಗೊತ್ತಾಗಿಬಿಟ್ರೆ ಶಿವಣ್ಣನ ಬಗ್ಗೆ ಇರೋ ಮಿಸ್ಟಿಕ್ ಹೋಗ್ಬಿಡತ್ತೆ. ಹಂಗಾಗಿ ಬ್ಯಾಡ.